ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Sunday, 12 May 2019

ಫೇಸ್ ಬುಕ್ ಪಾಠಟಿಪ್ಪಣಿ-೧೦ ಮನಸೊಂದಿದ್ದರೆ ಮಾರ್ಗವೂ ಉಂಟು...


ಶೈಕ್ಷಣಿಕ ಕ್ಷೇತ್ರದಲ್ಲಿ ಪಾಠಬೋಧನಾ ವಿಧಾನಗಳ ಜ್ಞಾನ(ಪೆಡಗಾಜಿ) ಅತ್ಯಂತ ಪ್ರಮುಖವಾದುದು. ಅದೇ ರೀತಿ ಪಠ್ಯದಲ್ಲಿನ ಪಠ್ಯವಸ್ತುವನ್ನು ವಿದ್ಯಾರ್ಥಿಗಳು ಸ್ವೀಕರಿಸುವಲ್ಲಿ ಈ ಪಾಠ ಬೋಧನಾ ವಿಧಾನ ಯಥೇಚ್ಛವಾಗಿ ಪ್ರಭಾವ ಬೀರಬಲ್ಲುದು. ಸದ್ಯದ‌ ಪರಿಸ್ಥಿತಿಯಲ್ಲಿ ಶಿಕ್ಷಕರಿಗೆ ಬೇಕಾಗಿದ್ದು TPACK. ಈಗಿನ ಬಿ.ಇಡಿಯಲ್ಲಿ ಇದರ ಪ್ರಾಮುಖ್ಯತೆಯನ್ನು ಸಾಮಾನ್ಯವಾಗಿ ಪ್ರಶಿಕ್ಷಣಾರ್ಥಿಗಳಿಗೆ ಕಲಿಸುತ್ತಾರೆ. ಇದನ್ನು ತಿಳಿಯುವ ಮುನ್ನ ಮೊದಲಿನಿಂದ ಮೂಲಭೂತ ಅಂಶಗಳನ್ನು ಸರಳವಾಗಿ ತಿಳಿದುಕೊಳ್ಳೋಣ.
 ಶಿಕ್ಷಕನಿಗೆ ಮೊದಲು ಪಠ್ಯವಸ್ತುವಿನ ಜ್ಞಾನ ಇರಬೇಕು.ಇದನ್ನೇ ನಾವು Content Knowledge(CK) ಅಂತ ಕರೀತೇವೆ. ಅಂದರೆ ಕಲಿಸಬೇಕಾದ ವಿಷಯದ ಬಗ್ಗೆ ಸಂಪೂರ್ಣ ಜ್ಞಾನವಿರಬೇಕು. ಬರುಬರುತ್ತ ಇದು ಬದಲಾಯಿತು. ಪಠ್ಯವಸ್ತುವಿನ ಬಗ್ಗೆ ಜ್ಞಾನವಿದ್ದರೆ ಸಾಲದು. ಪಾಠಬೋಧನಾ ಜ್ಞಾನದೊಂದಿಗೆ ಪಠ್ಯವಸ್ತ್ತು ಜ್ಞಾನವಿರಬೇಕು.ಅಂದರೆ ಪಠ್ಯವಸ್ತುವನ್ನು ಯಾವ ಕಲಿಕಾ ವಿಧಾನಗಳ ಮೂಲಕ ಕಲಿಸಬೇಕೆಂಬುದರ ಬಗೆಗಿನ ಜ್ಞಾನ.  ಇದನ್ನೇ ನಾವು ಇಂಗ್ಲಿಷ್ನಲ್ಲಿ Pedagogical And Content Knowledge (PACK) ಎನ್ನುತ್ತೇವೆ. ಶೈಕ್ಷಣಿಕ ಸ್ಥಿತಿ ಗತಿ ಬದಲಾದಂತೆ ಇದೂ ಕೂಡ ಬರಬರುತ್ತ ಬದಲಾಯಿತು. ತಂತ್ರಜ್ಞಾನಾಧಾರಿತ ಪಾಠಬೋಧನಾ ಜ್ಞಾನಾಧಾರಿತ ಹಾಗೂ ಪಠ್ಯವಸ್ತು ಜ್ಞಾನವಿರುವ ವ್ಯವಸ್ಥೆ ಜಾರಿಯಾಯಿತು. ಪಾಠೋಬೋಧನಾ ಕಲಿಕಾ ವಿಧಾನಗಳಲ್ಲಿ ವ್ಯಾಪಕವಾಗಿ ತಂತ್ರಜ್ಞಾನದ ಬಳಕೆಯಾಗತೊಡಗಿತು. ಕಪ್ಪುಹಲಗೆಗಳೆಲ್ಲ ಶ್ವೇತ ಹಲಗೆ,ಹಸಿರು ಹಲಗೆಗಳಾದವು. ರೇಡಿಯೋ ಪಾಠಗಳು, ಟಿವಿ ಪಾಠಗಳು ತರಗತಿ ಕೋಣೆಗೆ ಲಗ್ಗೆ ಇಟ್ಟವು. ಕಂಪ್ಯೂಟರ್ ಹಾಗೂ ಮೈಕ್ರೋಫೋನ್ ಗಳು ತರಗತಿಯಲ್ಲಿ ವಿಜೃಂಭಿಸಲಾರಂಭಿಸಿದವು. ಪ್ರೊಜೆಕ್ಟರ್ ಗಳು ಜಗತ್ತನ್ನೇ ತರಗತಿಯ ಗೋಡೆಗಳ ಮೇಲೆ ತೋರಲಾರಂಭಿಸಿಸವು.  ಇದನ್ನೇ ನಾವು ಇಂಗ್ಲಿಷ್ನಲ್ಲಿ Technological Pedagogical And Content Knowledge(TPACK) ಅಂತ ಕರೀತೇವೆ.

ಹೀಗೆ ಮುಂದುವರೆದ TPACK ಅನ್ನು ನಮ್ಮ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಿಕೊಳ್ಳುವುದು ತೀರಾ ದುರ್ಲಭದ ಮಾತಾಗಿತ್ತು. ಶಿಕ್ಷಕ ಅದೇ ಕಪ್ಪು ಹಲಗೆಯ ಮೇಲೆ ಪುಡಿಯಾಡುವ ಸೀಮೆಸುಣ್ಣ ಬಳಸಿ ಬಳಸಿ ಊಟದ ಹೊತ್ತಿಗೆ ಎರಡೆರೆಡು ಚೊಂಬು ನೀರು ಹೊಯ್ದುಕೊಳ್ಳಬೇಕಾಗಿತ್ತು. ಚಿತ್ರಪಟವನ್ನೋ ಅಥವಾ ಮಾರುದ್ದ ಮ್ಯಾಪ್ ಗಳನ್ನು ಬಳಸಿ ಭೂತಗನ್ನಡಿ ಬಳಸಿ ದೇಶ ಹುಡುಕಬೇಕಿತ್ತು. ಅಮೂರ್ತ ಪರಿಕಲ್ಪನೆಗಳ ಜಾಡಿನಲ್ಲಿರುವ ಗಣಿತ- ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕ ಲಭ್ಯ ವಸ್ತುಗಳನ್ನ ಬಳಸಿ ಪಾಠಮಾಡುವಾಗ ಬಹಳ ಹೈರಾಣಾಗುತ್ತಿತ್ತು. ಈಗ ಎಲ್ಲವೂ ಬದಲಾಗುತ್ತಿದೆ. ಸೀಮಿತವಾಗಿ ಶಾಲೆಗಳಲ್ಲಿ ಹಸಿರು ಮತ್ತು ಶ್ವೇತ ಹಲಗೆಗಳು ರಾರಾಜಿಸುತ್ತಿವೆ. ದಾನಿಗಳಿಂದ ಹಾಗೂ ಸ್ವಂತ ಖರ್ಚಿನಲ್ಲೇ ಅನೇಕ ಜನ ಶಿಕ್ಷಕರು ಪಾಠೋಪಕರಣಗಳನ್ನು ತಯಾರಿಸುತ್ತಿದ್ದಾರೆ. ಕಂಪ್ಯೂಟರ್ ಪ್ರೊಜೆಕ್ಟರ್ ಬಳಸಿ ಒಂದು ಕೋಣೆಯನ್ನು ಸ್ಮಾರ್ಟ್ ಕ್ಲಾಸ್ ಮಾಡಿದ್ದಾರೆ. ಅನೇಕ ಆ್ಯಪ್ ಗಳನ್ನು ಬಳಸಿ ಅಂತರ್ಕ್ರಿಯಾತ್ಮಕ ಪಠ್ಯವಸ್ತುವನ್ನು ಅಳವಡಿಸಿಕೊಂಡಿದ್ದಾರೆ. ಇಷ್ಟೆಲ್ಲ ಯಾಕೆ ಬರೆಯಬೇಕಾಯಿತು ಎಂದರೆ ಅದು 2011ರ ಇಸವಿ. ನನ್ನ ಆತ್ಮೀಯ ಶಿಕ್ಷಕ ಮಿತ್ರರಾದ‌ ಸಂಗನಗೌಡ ಎಂಬುವರು ತಮ್ಮ ಕಿರಿಯ ಪ್ರಾಥಮಿಕ  ಶಾಲೆಗೆ ಮೂರು ಕಂಪ್ಯೂಟರ್ ಗಳನ್ನು ಇನ್ಫೋಸಿಸ್ ಪ್ರತಿಷ್ಠಾನದಿಂದ ದಾನವಾಗಿ ಪಡೆದುಕೊಂಡು ಮಕ್ಕಳಿಗೆ ಕಂಪ್ಯೂಟರ್ ಕಲಿಸಲಾರಂಭಿಸಿದ್ದರು. ನಾನೂ ಯಾಕೆ ಹೀಗೆ ಮಾಡಬಾರದು ಅಂತ ಅನ್ನಿಸಿತು.ನನ್ನ ಸಹೋದ್ಯೋಗಿಯಾಗಿದ್ದ ಗೋಣೆಪ್ಪ ಹಾಗೂ ಮಂಜುನಾಥ ಇವರ ಜತೆ ಚರ್ಚಿಸಿದಾಗ ಅವರೂ ಒಪ್ಪಿದರು. ಈ ಮೊದಲು ಗ್ರಾಮದ ದಾನಿಗಳಿಂದ ಒಂದು ಕಂಪ್ಯೂಟರ್ ಪಡೆಯಬೇಕೆಂಬ ಪ್ರಯತ್ನ ವಿಫಲವಾಗಿತ್ತು. ಇನ್ಫೋಸಿಸ್ ಮೇಲ್ ಗೆ ನಮ್ಮ ಶಾಲೆಯ ವಿವರವನ್ನು ಹಾಕಿ ವಿನಂತಿ ಪತ್ರ ಮೇಲ್ ಮಾಡಿದೆ. ಮೂರು ತಿಂಗಳಾದರೂ ಆ ಕಡೆಯಿಂದ ಪ್ರತ್ಯುತ್ತರ ಬರಲೇ ಇಲ್ಲ. ತುಂಬಾ ಬೇಜಾರಾಯಿತು. ಪದೇ ಪದೇ ಮೇಲ್ ಮಾಡಿದೆ. ಕೊನೆಗೊಂದು ದಿನ ಆ ಕಡೆಯಿಂದ ಮೇಲ್ ಬಂತು.

ಕೆಲವು ಷರತ್ತುಗಳ ಮೇರೆಗೆ ಜುಲೈ2013 ರಲ್ಲಿ ನಮ್ಮ ಶಾಲೆಗೆ 3 ಕಂಪ್ಯೂಟರ್ ಗಳು ಬಂದವು. ನಾವೆಲ್ಲ ಶಿಕ್ಷಕರು ಸೇರಿ ಪ್ರಿಂಟರ್ ,ಟೇಬಲ್ ತಂದೆವು. ನವ್ಹೆಂಬರ್ ತಿಂಗಳಿನಿಂದ ಕಂಪ್ಯೂಟರ್ ಬೇಸಿಕ್ ಕಲಿಸಲು ಶುರು ಮಾಡಿದೆವು. ಯ್ಯೂ ಟ್ಯೂಬಿನ ವಿಡಿಯೋಗಳ ಮೂಲಕ ನಮ್ಮ ಪಾಠ ಬೋಧನೆ ನಡೆಯತೊಡಗಿತು. ಮಕ್ಕಳ ಹಾಜರಾತಿ ಹೆಚ್ಚತೊಡಗಿತು. ವಿದ್ಯಾರ್ಥಿಗಳಲ್ಲಿ ಸಹಪಾಠಿ ಕಲಿಕೆಯಿಂದಾಗಿ ಬಹಳಷ್ಟು ಬದಲಾವಣೆಯಾಯಿತು. ಗೂಗಲ್ ಮ್ಯಾಪ್ ಮೂಲಕ ನಕಾಶೆ ಬೋಧನೆ ಸರಳವಾಯಿತು. ಅಮೂರ್ತ ಪರಿಕಲ್ಪನೆಗಳು ಕಂಪ್ಯೂಟರ್ ನ ವಿಡಿಯೋಗಳಿಂದಾಗಿ ಮಕ್ಕಳಿಗೆ ಮನಮುಟ್ಟುವಂತೆ ಅರ್ಥವಾಗತೊಡಗಿದವು.  ಪ್ರೊಜೆಕ್ಟರ್ ತಂದು ಸ್ಮಾರ್ಟ್ ಕ್ಲಾಸ್ ಮಾಡುವ ಕನಸೊಂದು ಹಣದ ಕೊರತೆಯಿಂದಾಗಿ ಅಲ್ಲೇ ನಿಂತಿತು.(ನಾನು ಸಿ.ಆರ್.ಪಿ ಆಗಿ ಆಯ್ಕೆಯಾದ ಮೇಲೆ ಆ ಶಾಲೆಯಿಂದ ಬೇರೆ ಕಡೆ ನಿಯುಕ್ತಿ ಹೊಂದಬೇಕಾಯಿತು)

ಮುಂದೊಂದು ದಿನ ನಮ್ಮಲ್ಲೂ ಸ್ಮಾರ್ಟ್ ಕ್ಲಾಸ್ ಆಗುತ್ತದೆ ಎಂಬ ನಿರೀಕ್ಷೆ ಇದೆ. ಬದಲಾವಣೆಗಳು ನಿಧಾನವಾದರೂ  ಪ್ರಧಾನವಾಗಿರಬೇಕು. ನಾವು ಶಿಕ್ಷಕರು ಮನಸ್ಸು ಮಾಡಿದರೆ ಜಗತ್ತನ್ನು ಅಂಗೈಲಿ ತೋರಿಸಬಹುದು. ಗ್ರಾಮದವರ ಸಹಕಾರವಿದ್ದರಂತೂ ನಮ್ಮ ಮುಂದೆ ಯಾವುದೂ ಅಸಾಧ್ಯವಲ್ಲ. ಈಗಿನ ಸಂದರ್ಭದಲ್ಲಿ ನಮ್ಮನ್ನು ನಾವು ಇಂದೀಕರಿಸಿಕೊಳ್ಳದಿದ್ದರೆ ಜಗತ್ತು ನಮ್ಮನ್ನು ನಿರ್ಲಕ್ಷಿಸುತ್ತದೆ. ನಮ್ಮ ಜೇವರ್ಗಿ ತಾಲೂಕಿನಲ್ಲಿನ ಕೆಲ ಶಿಕ್ಷಕ ಮಿತ್ರರು ನಿಜಕ್ಕೂ ತಮ್ಮ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಮಾಡಿದ್ದಾರೆ. ಅವರ ಯಶೋಗಾಥೆ ಬಗ್ಗೆ ಮತ್ತೇ ಮಾತಾಗುತ್ತೇನೆ. ಇದೇ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹ ಅಜೀಂ ಪ್ರೇಮ್ ಜೀ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಮುಖ್ಯಗುರುಗಳಿಗೆ ತರಬೇತಿ ನೀಡಿತ್ತು. ಎಷ್ಟೋ ಕಡೆ ಭೌತಿಕ,ಶೈಕ್ಷಣಿಕ ಹಾಗೂ ಆರ್ಥಿಕ  ಸಂಪನ್ಮೂಲಗಳು ಹರಿದು ಬಂದವು. ಕೆಲವು ಕಡೆ ಯಶಸ್ಸು ದಕ್ಕಲಿಲ್ಲ.

"ಆಗದು ಎಂದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವೂ ಉಂಟು
ಕೆಚ್ಚೆದೆ ಇರಬೇಕೆಂದೆಂದೂ"

ಎಂಬ ಗೀತೆಯಂತೆ  ಒಟ್ಟಿನಲ್ಲಿ ಹೇಳುವುದಾದರೆ ಎಲ್ಲದಕ್ಕೂ ಮನಸ್ಸು ಮಾಡಬೇಕು. ಒಂದು ಸುಂದರ ನಾಳೆಯ ನಿರ್ಮಾಣ ಕಾರ್ಯ ಶಿಕ್ಷಕ ಗುರುತರವಾದ ಜವಾಬ್ದಾರಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅನಿವಾರ್ಯವೂ ಆಗಿದೆ.. ಹೌದಲ್ಲವೇ?

©ಲೇಖಕರು : ಸಚಿನ್ ಕುಮಾರ ಬ‌.ಹಿರೇಮಠ

No comments:

Post a Comment