ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Tuesday, 30 April 2019

ಫೇಸ್ ಬುಕ್ ಪಾಠಟಿಪ್ಪಣಿ-೯ : ಲಕ್ಷ್ಮೀ ಎಂಬ ಗೋಪಾಲಕಿ


ಆ ಪುಟ್ಟ ಹುಡುಗಿಯ ಮುದ್ದು ಮುಖ ಈಗಲೂ ನೆನಪಿದೆ. ಬಹುಶಃ ಅವಳ ಭೇಟಿ ನನ್ನ ವೃತ್ತಿ ಬದುಕಿನ ಮಹತ್ತರ ತಿರುವಿಗೆ ಕಾರಣ ಎಂದರೂ ತಪ್ಪಾಗಲಾರದು. ನಲಿ ಕಲಿ ತರಗತಿಗೆ ದಾಖಲಾದಾಗ ಅಷ್ಟೇನೂ ಹಚ್ಚಿಕೊಳ್ಳದ ಅವಳು ಹಿರಿಯ ತರಗತಿಗೆ ಬಂದಾಗ ಗುರು ಶಿಷ್ಯ ಸಂಪ್ರದಾಯಕ್ಕೆ ಅವಳೊಂದು ಹೊಸ ಭಾಷ್ಯ ಬರೆದು ಹೋಗಿದ್ದಳು.
ಅವಳ ಹೆಸರು ಲಕ್ಷ್ಮೀ. ಸಾಕ್ಷಾತ್ ಶ್ರೀ ಲಕ್ಷ್ಮೀಯ ಕಳೆ ಮುಖದಲ್ಲಿ. ಆದರೆ ಹೆಸರಿನಲ್ಲೇನಿದೆ? ಎನ್ನುವಂತೆ ಅವಳ ಹೆಸರು ಲಕ್ಷ್ಮೀ ಆಗಿದ್ದರೂ ಮನೆಯಲ್ಲಿ ತೀರಾ ಬಡತನ. ಅವಿಭಕ್ತ ಕುಟುಂಬವಾದ್ದರಿಂದ ತಂದೆ ತಾಯಿ ಅಜ್ಜಿ ಸೇರಿದಂತೆ ಎಲ್ಲರೂ ಸ್ವಂತ ಹೊಲಮನೆ ಕೆಲಸದೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಮನೆಯ ದನಕರುಗಳ ಜವಾಬ್ದಾರಿ ಈಕೆಗೆ. ಶಾಲೆಗೆ ಅನಿಯಮಿತವಾದ ಹಾಜರಿ. ಅವಳ ತಂದೆ ನಿಂಗಣ್ಣನಿಗೂ ಅಜ್ಜಿ ಕಾಳಮ್ಮನಿಗೂ ಅನೇಕ ಬಾರಿ ತಾಕೀತು ಮಾಡಿದ್ದೆವು. ನಮ್ಮ ಮುಂದೆ ಹ್ಞೂಂಗುಟ್ಟಿ ಮತ್ತದೇ ಕಾಯಕ. ಈಕೆ ಶಾಲೆಗೆ ಹಾಜರಾದಾಗ ಅದೇ ಸಿದ್ಧ ಉತ್ತರ."ಸರ್ ಮನ್ಯಾಗೆಲ್ರೂ ಹೊಲಕ್ಕ ಹೋಗಿದ್ರಿ..ನಾ ದನಕರ ಹೊಡ್ಕೊಂಡ್ ಹೋಗಿದ್ಯರೀ.."
ವಾರಕ್ಕೆ ಎರಡು ಮೂರು ದಿನ ಗೈರಾದರೂ ಲಕ್ಷ್ಮೀಯ ಬುದ್ಧಿಶಕ್ತಿ ಅಸಾಮಾನ್ಯವಾದುದು. ಮರುದಿನ ಶಾಲೆಗೆ ಬಂದಾಗ ಎಲ್ಲವನ್ನೂ ತನ್ನದೇ ಆದ ವೇಗದಲ್ಲಿ ಕಲಿತುಬಿಡುತ್ತಿದ್ದಳು. ಅವಳ ಗ್ರಹಿಕೆ ಎಷ್ಟು ತೀಕ್ಷ್ಣವಿತ್ತೆಂದರೆ ಅನೇಕ ಬಾರಿ ನಮ್ಮ ಸಣ್ತಪ್ಪುಗಳನ್ನು ಕಂಡು ಹಿಡಿದು ಬಿಡುತ್ತಿದ್ದಳು.
ಒಂದು ದಿನ ಗಣಿತ ಬೋಧನೆಯಲ್ಲಿ ವೃತ್ತದ ವಿಸ್ತೀರ್ಣ A= πr^2 ಹೇಗೆ ಬರುತ್ತೆ ಎಂಬುದನ್ನು ನಾನು ವಿವರಿಸುತ್ತಿದ್ದೆ. ವೃತ್ತವನ್ನು ಕೇಂದ್ರದಿಂದ ಪರಿಧಿಗನುಸಾರವಾಗಿ ಸಮನಾದ ತುಂಡು ಮಾಡಿ ಅವನ್ನು ಹಿಂದುಮುಂದಾಗಿ ಜೋಡಿಸಿ ಒಂದು ಆಯತಾಕಾರ ರಚನೆ ಮಾಡಿದಾಗ ಅದರ ಉದ್ದ ವೃತ್ತದ ಅರ್ಧ ಪರಿಧಿಗೂ, ಅಗಲ ವೃತ್ತದ ತ್ರಿಜ್ಯಕ್ಕೂ ಸಮನಾಗಿರುತ್ತದೆ  ಎಂದು ಹೇಳುವಷ್ಟರಲ್ಲಿ ಆಕೆ ಎದ್ದು ನಿಂತು, "ಸರ್ ಮುಂದಿಂದ ನಾ ಹೇಳ್ತೇನ್ರೀ" ಅಂದಳು.
"ಆಯ್ತು ಹೇಳವಾ" ಅಂತಂದೆ. ಆಕೆ ಯಥಾವತ್ತಾಗಿ ಸೂಕ್ತರೀತಿಯಲ್ಲಿ ವಿವರಿಸಿದಾಗ ನನಗೆ ಎಲ್ಲಿಲ್ಲದ ಖುಷಿ ಹಾಗೂ ಆಶ್ಚರ್ಯ. ನಾ ಕೇಳಿದೆ,
"ಲಕ್ಷ್ಮೀ ನಿನಗೆ ಇದೆಲ್ಲಾ ಹೇಗೆ ಗೊತ್ತು?"
"ಸರ್ ನಿ‌ನ್ನೆ ದನಕರ ಹೊಡ್ಕೊಂಡ್ ಹೋದಾಗ್ರೀ ಪುಸ್ತಕ್ ಒಯ್ದಿದ್ನ್ರೀ.. ಅಲ್ಲಿ ನೀವು ಇವತ್ತ ಈ ಪಾಠ ಹೇಳ್ತೀರಂತ ಗೊತ್ತಿತ್ರಿ.. ದನ ಮೇಯೂತನಕ ನಾನೂ ಗಣಿತ ಪಾಠ ಓದ್ಕೊಂಡ್ನಿರಿ.. ಪುಸ್ತಕದಾಗ ನೀವ್ ಹೇಳ್ದಂಗ ಕೊಟ್ಟಾರ್ರೀ.."
ಅಂತಂದಾಗ ನಾನು ಮನಸ್ಸಿನಲ್ಲೇ ಅಂದುಕೊಂಡೆ,
"ನಾ ಹೇಳ್ದಂಗಲ್ಲವಾ..ಅಲ್ಲಿ ಹೇಳ್ದಂಗನಾ ಹೇಳಬೇಕು"
ಆ ಹುಡುಗಿ ಹೀಗೆ ಪಠ್ಯಪುಸ್ತಕವನ್ನ ಮೊದಲೇ ಓದಿಕೊಂಡು ತನಗೆ ಎಷ್ಟು ಅರ್ಥವಾಗುತ್ತೋ ಅಷ್ಟನ್ನು ಎಲ್ಲ ಶಿಕ್ಷಕರೂ ಪಾಠ ಮಾಡುವ ಸಂದರ್ಭದಲ್ಲಿ ಅಭಿವ್ಯಕ್ತಿಸುತ್ತಿದ್ದಳು. ಅವಳು ಹೇಳುವಂತೆ ಅವಳಿಗೆ ದನ ಕರ ಕಾಯುವ ಕೆಲಸ ವಾರದಲ್ಲಿ ಎರಡು ಮೂರು ದಿನ ಖಾಯಮ್ಮಾಗಿತ್ತು. ಈ ನಿಟ್ಟಿನಲ್ಲೇ ಅವಳು ತಾನೂ ಅಂದು ತರಗತಿಯಲ್ಲಿ ಕಲಿಯಬೇಕಿದ್ದ ಪಾಠಗಳಿಗೆ ಸಂಬಂಧಿಸಿದ್ದಂತೆ ಪಠ್ಯಪುಸ್ತಕಗಳನ್ನು ನೀರು ಬುತ್ತಿಯ ಜತೆ ತಪ್ಪದೇ ಒಯ್ಯುತ್ತಿದ್ದಳಂತೆ. ತನಗೆ ಅರ್ಥವಾಗದ ಅಂಶಗಳನ್ನು ಗುರುತಿಸಿ ಮರುದಿನ‌ ತರಗತಿಯಲ್ಲಿ ನಮ್ಮೊಂದಿಗೆ ಚರ್ಚಿಸುತ್ತಿದ್ದಳು. ಈ ಕೌಶಲ ಅವಳಲ್ಲಿ ಹೇಗೆ ಬೆಳೆಯಿತೋ ಗೊತ್ತಿಲ್ಲ.. ನನ್ನ ಅಭಿಪ್ರಾಯದಲ್ಲಿ ನಲಿ ಕಲಿ ಕಲಿಕಾ ವಿಧಾನದ ಕೃಪೆ ಅನ್ನಿಸುತ್ತದೆ. ಅವಳು ಶಾಲೆಗೆ ಬಂದ ದಿನ ಮಾತ್ರ ಕರಾರುವಕ್ಕಾದ ದಿನಚರಿ ಅವಳದ್ದು. ಶಾಲಾವರಣ ಶುಚಿಗೊಳಿಸಿ, ಪ್ರಾರ್ಥನೆಗೆ ಎಲ್ಲರಿಗೂ ನೆರವಾಗಿ ಕೊನೆಯ ಬೆಲ್ಲಿನ ತನಕವೂ ಅವಳು ಮೈಯೆಲ್ಲ ಕಣ್ಣಾಗಿಸಿ ಜವಾಬ್ದಾರಿ ನಿಭಾಯಿಸುತ್ತಿದ್ದಳು. ಅವಳ ಆ ಸಮಯ ಪಾಲನೆ, ಬದ್ಧತೆ,ತರಗತಿಯಲ್ಲಿ ಅವಳ ವಿನಯವಂತಿಕೆ ಕೆಲವು ಸಲ ನನ್ನನ್ನೂ ನನ್ನ ವೃತ್ತಿ ವೈಕಲ್ಯಗಳನ್ನೂ ತಿದ್ದಿದವು. ಮೊದಲೇ ಹೇಳಿದಂತೆ ನನ್ನ ವೃತ್ತಿಪರತೆಯನ್ನು ಗಟ್ಟಿಗೊಳಿಸಲು ಈ ಲಕ್ಷ್ಮೀಯ ನಡೆನುಡಿಗಳೇ ಕಾರಣ. ಒಬ್ಬ 12 ವಯಸ್ಸಿನ ಹುಡುಗಿ ತಾನು ತನ್ನ ಮನೆಯ ಹಾಗೂ ಶೈಕ್ಷಣಿಕ ಒತ್ತಡಗಳನ್ನು ಇಷ್ಟು ಸಮತೋಲಿತವಾಗಿ ನಿಭಾಯಿಸುತ್ತಿದ್ದಾಳೆ ಎಂದರೆ ಶಿಕ್ಷಕರಾದ ನಮಗೇಕೆ ಆ ಬದ್ಧತೆಯಿಲ್ಲ..? ಅಂತ ಅನೇಕ ಬಾರಿ ಅನ್ನಿಸಿದ್ದುಂಟು. ಅವಳ ಕೈಬರಹವೂ ಅಷ್ಟೇ ಸುಂದರ. ಸಹಪಠ್ಯೇತರ ಚಟುವಟಿಕೆಗಳಲ್ಲೂ ಅವಳದ್ದು ಎತ್ತಿದ ಕೈ. ಆಟೋಟಗಳಲ್ಲಿ ಯಾವ ಗಂಡು ಮಕ್ಕಳಿಗೂ ಅವಳೂ ಕಡಿಮೆಯಿರಲಿಲ್ಲ. ಕೆಲವು ಸಲ ನಾನು,
"ಮುಂದಿನ ತಿಂಗಳು ನಾನು, ಗೋಣೆಪ್ಪ ಸರ್ ಹಾಗೂ ಮಂಜುನಾಥ್ ಸರ್ ಇವರೆಲ್ಲ ಬೇರೆ ಊರಿಗೆ ಟ್ರಾನ್ಸ್ಫರ್ ಆಗಿ ಹೋಗ್ತಿದ್ದೀವಿ" ಅಂತಂದಾಗ ಆಕೆ,
"ನೀವೆಲ್ಲಾ ಹೋದ್ರ ನಾ ಸಾಲಿ  ಬಿಟ್ಟಬಿಡತೀನ್ ನೋಡ್ರಿ ಸರ್.."
ಅಂತ ಬೆದರಿಸುತ್ತಿದ್ದಳು‌. ಹೀಗೆ ಅನ್ನುತ್ತಿದ್ದವಳು ಮತ್ತೇ ಎರಡು ಮೂರು ದಿನ ಗಾಯಬ್.
ಆಕೆಯ ಪೋಷಕರಿಗೆ ಅನೇಕಬಾರಿ ಅವಳನ್ನು ಶಾಲೆ ಬಿಡಿಸಿ ದನ ಕರು ಕಾಯಲು ಕಳಿಸಬೇಡಿ ಎಂದು ಹೇಳಿದ್ದಕ್ಕೆ ಅವಳ ಪೋಷಕರು,
"ಏನ್ ಮಾಡೂದ್ ಸರ್..ಮನಿ ಪರಿಸ್ಥಿತಿ ಹಂಗೈತಿ" ಅಂತ ಗೋಗರೆಯುತ್ತಿದ್ದರು. ಆದರೆ ಹಿರಿಯ ತರಗತಿಗೆ ಬಂದಾಗ ಅವಳ ಗೈರು ಕಡಿಮೆಯಾಗತೊಡಗಿತ್ತು.
ಎಂಟನೆಯ ತರಗತಿ ಬರುವ ಹೊತ್ತಿಗೆ ಅವಳ ಮನೆಯ ಪರಿಸ್ಥಿತಿ ಹೇಗಿತ್ತೊ ಗೊತ್ತಿಲ್ಲ.. ನಾನು ಅಲ್ಲಿಂದ ಬೇರೆ ಕಡೆ ಬಂದ ಮೇಲೆ ಅವಳ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ.. ಕೆಲವರನ್ನು ವಿಚಾರಿಸಿದಾಗ ಅವಳಿಗೆ ಶಾಲೆ ಬಿಡಿಸಿದ್ದಾರೆ ಅಂತ ಹೇಳಿದ್ರು. ಎಸ್ಎಸ್ಎಲ್ಸಿಯಲ್ಲಿ  ಚೆನ್ನಾಗಿ ಪರ್ಸೆಂಟೇಜ್ ಮಾಡಿದ್ದಾಳೆ ಆದ್ರೆ  ಮುಂದೆ ಓದೋದು ಬೇಡ ಅಂತ್ಹೇಳಿ ಮದುವೆಗೆ ತಯಾರಿ ನಡೆದಿದೆ ಅಂತ ಇನ್ನೊಬ್ರು ಹೇಳಿದ್ರು. ಬೇರೆ ಊರಲ್ಲಿ ಇದ್ದಾರೆ ಅಂತ ಮತ್ತೊಬ್ರು ಹೇಳಿದ್ರು. ಅವಳೆಲ್ಲೇ ಇರಲಿ ಅವಳು ತನ್ನ ಬದುಕಿಗಂತೂ ಭದ್ರ ನೆಲೆ ಕಂಡುಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ‌. ಆದ್ರೆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ಮದುವೆಗೆ ದೂಡುವ ಕೆಟ್ಟ ಸಂಪ್ರದಾಯ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂತಹ ಲಕ್ಷ್ಮೀಯರು ನಮ್ಮಂಥ ಶಿಕ್ಷಕರ ಮನಸ್ಸಲ್ಲಿ ಸದಾ ನೆನಪಾಗಿ ಇರುತ್ತಾರೆ. ನಮ್ಮ ವೃತ್ತಿಪರತೆಗೆ ಮನಸಿನೊಳಗಿಂದಲೇ ಮಾರ್ಗದರ್ಶನ ನೀಡುತ್ತಿರುತ್ತಾರೆ. ನಾವು ಅವರಿಗೆ ಕೆಲ ವರ್ಷಗಳವರೆಗೆ ಮಾತ್ರ ಗುರು. ಆದರೆ ಅವರೂ ನಮಗೆ ನಿರಂತರ ಗುರು.
©ಲೇಖಕರು : ಸಚಿನ್ ಕುಮಾರ ಬ.ಹಿರೇಮಠ

No comments:

Post a Comment