ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Monday, 8 April 2019

ಫೇಸ್ ಬುಕ್ ಪಾಠ ಟಿಪ್ಪಣಿ-೨ ಮಾರ್ತಾಂಡನೆಂಬ ಸೂರ್ಯನ ಕತೆ...


ನಾಲ್ಕನೆಯ ತರಗತಿಯಲ್ಲಿ ನಡೆದ ಸಂಗತಿ. ನಿಧಾನ ಗತಿಯ ಕಲಿಕೆಯ ಮಕ್ಕಳನು ಬೇರೆ ವಿಧಾನಗಳಿಂದ ಅಭ್ಯಾಸ ಮಾಡಿಸಬೇಕೆನ್ನುವುದು ಇಲಾಖೆಯ ಕಾರ್ಯಕ್ರಮಗಳಲ್ಲೊಂದಾಗಿತ್ತು. ಮಾರ್ತಾಂಡ ಎಂಬ ವಿದ್ಯಾರ್ಥಿ ನನ್ನ ಬಲು ಕಾಡಿದ ವಿದ್ಯಾರ್ಥಿ.. ನಾಲ್ಕನೆಯ ತರಗತಿಗೆ ಬಂದಿದ್ದರೂ ಮೂಲಾಕ್ಷರಗಳ ಪರಿಚಯವಿಲ್ಲದ ಬರೆಯಲು ಓದಲು ಬಹಳ ತೊಂದರೆಯನ್ನನುಭವಿಸುತ್ತಿದ್ದ ಹುಡುಗ. ಎಂಥೆಂಥ ವಿದ್ಯಾರ್ಥಿಗಳು ಸಲೀಸಾಗಿ ಕನಿಷ್ಠ ಮಟ್ಟದಲ್ಲಾದರೂ ಅಕ್ಷರಗಳನ್ನು ಬರೆಯಲು ಕಲಿಯುತ್ತಿದ್ದರೂ ಈತ ಮಾತ್ರ ಅಯೋಮಯ. ಬೆನ್ನಿಗೆ ಬಾರಿಸುವಷ್ಟು ಕೋಪ ಬರುತ್ತಿತ್ತಾದರೂ‌ ಏನೂ ಪರಿಹಾರ ಸಿಗಲಿಲ್ಲ. ಶಾಲೆಗೆ ಅರ್ಧ ಗಂಟೆ ತಡ ಮಾಡಿ ಬರುತ್ತಿದ್ದ ಈತ ತರಗತಿಯೊಳಗೆ ತುಟಿ ಪಿಟಿಕ್ಕೆನ್ನುತ್ತಿರಲಿಲ್ಲ. ಪಾಠ ಮಾಡುವಾಗ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದನಾದರೂ ಪ್ರತಿ ಸ್ಪಂದನೆ ಎನ್ನುವುದು ಅವನ್ನಲ್ಲಿರಲಿಲ್ಲ..ನಾನೂ ತುಸು ಸಿಟ್ಟಿಗೆದ್ದು ಬೈದರೆ ಕಣ್ಣು ಹನಿಗಟ್ಟುತ್ತಿದ್ದವು. ಆದರೆ ಪಾಪ ಅವನ‌ ಸಮಸ್ಯೆಯೇ ಬೇರೆ ಇತ್ತು.

ಗಣತಿಗೆಂದು ಅವನ ಮನೆಗೆ ಭೇಟಿ ನೀಡಿದಾಗ ಅವನ ಮೂಲ ಸಮಸ್ಯೆ ಅರ್ಥವಾಯಿತು. ಅವನದು ಪುಟ್ಟ ಕುಟುಂಬ. ಅದರಲ್ಲಿ ಅಜ್ಜಿ,ತಂದೆ ತಾಯಿ, ಅಕ್ಕ ಹಾಗೂ ಇವನ ಪುಟ್ಟ ತಂಗಿ. ತಂದೆಗೆ ಪಾರ್ಶ್ವವಾಯು ಹೊಡೆದು ತಿಂಗಳಾಗಿತ್ತು. ಇವನ ತಾಯಿ ಹಾಗೂ ಅಜ್ಜಿ ದಿನನಿತ್ಯ ಕೂಲಿಗೆ ತೆರಳಬೇಕಿತ್ತು. ಅಕ್ಕ ಹಾಗೂ ಇವನೂ ಇಬ್ಬರೂ ಶಾಲೆಗೆ ಬರುವಾಗ ಪುಟ್ಟ ತಂಗಿಯನ್ನೂ ಹೊತ್ತು ತರಬೇಕಿತ್ತು. ಎಷ್ಟೋ ಸಲ ನಾವೆಲ್ಲ ಶಿಕ್ಷಕರು 'ಪುಟ್ಟ ಮಕ್ಕಳನ್ನ ಶಾಲೆಗೆ ತರಬೇಡಿ' ಅಂತ ತಾಕೀತು ಮಾಡಿದ್ದೆವು. ಹಾಗಿದ್ದಾಗ ಒಮ್ಮೊಮ್ಮೆ ಅಕ್ಕ ಶಾಲೆ ಬಿಡುತ್ತಿದ್ದಳು. ಒಮ್ಮೊಮ್ಮೆ ಈತ ಶಾಲೆಗೆ ಚಕ್ಕರ್  ಹಾಕುತ್ತಿದ್ದ.. ತಂದೆಯ ವೈದ್ಯೋಪಚಾರಕ್ಕೆ ತಾಯಿ ಹಾಗೂ ಅಜ್ಜಿ ದುಡಿದರೆ ಮಕ್ಕಳದು ಈ ಪಾಡು. ಬೆಳಗ್ಗೆ 9 ಕ್ಕೆ ಕೂಲಿಗೆ ಹೋದನಂತರ ತಂದೆಗೆ ಈ ಅಕ್ಕ ತಮ್ಮ ಊಟ ಮಾಡಿಸಿ ಮಾತ್ರೆ ನುಂಗಿಸಿ ಶಾಲೆಗೆ  ಬರಬೇಕಿತ್ತು.. ಮಧ್ಯಾಹ್ನ ಊಟಕ್ಕೆ ಬಿಟ್ಟಾಗಲೂ ಸಹ ಇವರಿಬ್ಬರೂ ಒಂದರೆ ಘಳಿಗೆ ತಂದೆಯನ್ನು ಉಪಚರಿಸಿ ಬರುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಆತ ಕಲಿಯುವುದಾದರೂ ಹೇಗೆ? ಇಂಥ  ವಿಷಣ್ಣ ಪರಿಸ್ಥಿತಿಯಲ್ಲಿ ಆತ ಹೇಗೆ ಸಂತೋಷವಾಗಿ ಕಲಿಯಬಲ್ಲ?
ಮನೆಯ ಪರಿಸ್ಥಿತಿ ಹೀಗಾದರೆ ಮಾರ್ತಾಂಡ ನಿಧಾನ ಗತಿ ಕಲಿಕೆ ಇರುವ ಹುಡುಗ. ಆಗಿನಿಂದ ಅವನಿಗೆಂದೇ ತುಸು ಹೆಚ್ಚೇ ಅಭ್ಯಾಸ ನಾವು ಮಾಡಬೇಕಿತ್ತು. ಅವನ ಕನ್ನಡ ಕಲಿಕೆಗೆ ಕಾಪಿ ಬರಹ ಪುಸ್ತಕ, ಫ್ಲ್ಯಾಷ್ ಕಾರ್ಡ್ ಇತರೆ ಕಲಿಕೋಪಕರಣ ತಯಾರಿಸಿ ಅವನಿಗೆ ಮೂಲಾಕ್ಷರ ಕಲಿಸುವಷ್ಟರಲ್ಲಿ ಆತ ಐದನೆ ತರಗತಿ ಮುಗಿಸಿದ್ದ.. ಬರಬರುತ್ತ ವಿಶೇಷ ಆಸಕ್ತಿ ವಹಿಸಿ ಕಲಿಯ ತೊಡಗಿದ.. ಪದ ವಾಕ್ಯ ಓದಲು ಕಲಿತ. ಉತ್ತಮವಾಗಿ ಪ್ರತಿ ಸ್ಪಂದಿಸತೊಡಗಿದ.. ಈ ನಡುವೆ ಅವನ ತಂದೆ ತೀರಿಕೊಂಡರು. ನೋವಿನ ನಡುವೆಯೂ ಶಾಲೆಗೆ ನಿಯಮಿತವಾಗಿ ಬರತೊಡಗಿದ. "ಏನೋ ದಿನ್ನ ಸಾಲಿಗ ಬರಾಕತ್ತಿ..?" ಅಂತ ಅಂದಾಗ "ಗೋಣೆಪ್ಪ ಸರ್ ಮತ್ತ ನೀವೂ ಈಗ ಬೈಯಾಂಗಿಲ್ಲಲ್ರಿ ಅದ್ಕ"ಅಂತಂದ..
ಅವನಿಗೆ ಕಲಿಸಲಿಕ್ಕೆ ಹೋಗಿ ನಾವ್ ಕಲಿತದ್ದು ವಿದ್ಯಾರ್ಥಿಗಳ ಪ್ರ್ಯಾಕ್ಟಿಕಲ್ ಹಾಗೂ ಕ್ಲಿನಿಕಲ್ ಸೈಕಾಲಜೀ. ಸಿಟ್ಟು, ಶಿಕ್ಷೆ ಹಾಗೂ ನಿಂದನೆ ಶಿಕ್ಷಕರನ್ನು ಅವರ ವಿದ್ಯಾರ್ಥಿಗಳಿಂದ ದೂರ‌ ಮಾಡುತ್ತವೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳನ್ನು ನಕಾರಾತ್ಮವಾಗಿ ಕುಗ್ಗಿಸುತ್ತವೆ. ಸಮಸ್ಯೆಗೆ ಮೂಲ ಹುಡುಕುವುದರಿಂದ ವಿದ್ಯಾರ್ಥಿಗಳ ಅರ್ಧ ಸಮಸ್ಯೆಯನ್ನು ಪರಿಹರಿಸಬಹುದು. ಆತನ ಮನೆಗೆ ಭೇಟಿ ನೀಡಿ ಅವನ ನೈಜ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರೆಗೂ  ಮಾರ್ತಾಂಡನ ಕಣ್ಣುಗಳಲ್ಲಿನ ಕಣ್ಣೀರು ನನಗೆ ಅರ್ಥವಾಗಿರಲಿಲ್ಲ.

ಶಿಕ್ಷಕರಾದ ನಾವು ನಮ್ಮ ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ಒಂದು ಮಗುವಿನ ನಿಧಾನ ಕಲಿಕೆಗೆ ಆತನ ಪರಿಸರ ಬಹು ಮುಖ್ಯವಾಗಿ ಪ್ರಭಾವಿಸಿರುತ್ತದೆ.

ಈಗಲೂ ಆತನ ಆ ಮುಖ ನನಗೆ ನೆನಪಿದೆ. ಈಗ ಆತನ ಎಲ್ಲಿದ್ದಾನೋ ಗೊತ್ತಿಲ್ಲ.. ಮಾರ್ತಾಂಡ ಎಂದರೆ ಸೂರ್ಯ ಎಂದರ್ಥ.  ಸೂರ್ಯನನ್ನು ಕಂಡಾಗ ಮಾರ್ತಾಂಡ ನೆನಪಾಗುತ್ತಾನೆ. ಕಣ್ಣ ಹನಿಯಾಗಿ ಇಳಿದು ಹೋಗುತ್ತಾನೆ.

No comments:

Post a Comment